ಶಿರಸಿ: ಇತ್ತೀಚೆಗೆ ಹಲವಾರು ಕಡೆ ಹವ್ಯಕರಿಂದ ಹವ್ಯಕರಿಗಾಗಿ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳು ಆಯೋಜನೆಗೊಳ್ಳುತ್ತಿರುವುದು ಹರ್ಷವನ್ನುಂಟು ಮಾಡಿದೆ. ಇಂತಹ ಕಾರಣದಿಂದಾಗಿ ಹವ್ಯಕರು ಒಂದೆಡೆ ಸೇರಲು ಸಾಧ್ಯವಾಗುತ್ತಿದೆ. ಹೀಗೆ ಮನರಂಜನೆಗಾಗಷ್ಟೇ ಅಲ್ಲದೇ ಊರಿನ ಅಭಿವೃದ್ಧಿಗೂ ಸಹ ಎಲ್ಲರೂ ಸಂಘಟಿತರಾಗಬೇಕು. ,ಹಬ್ಬ ಹರಿದಿನಗಳ ಆಚರಣೆಗಾಗಿಯೂ ಸೇರಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ಪರಿಚಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು.ಎಲ್ಲಾ ರೀತಿಯಿಂದಲೂ ಊರು ಅಭಿವೃದ್ಧಿಯಾದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನೆಗ್ಗು ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಹೆಗಡೆ ಬಪ್ಪನಳ್ಳಿ ಹೇಳಿದರು.
ಅವರು ತಾಲೂಕಿನ ಗೋಳಗೋಡಿನಲ್ಲಿ ಸೋಮೇಶ್ವರ ಗೆಳೆಯರ ಬಳಗ ಹಾಗೂ ಊರ ನಾಗರಿಕರ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ಹವ್ಯಕ ಕೌಂಟಿ ಕ್ರಿಕೆಟ್ ಟೂರ್ನಮೆಂಟ್ನ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘಟಕರಾದ ಎಮ್.ಎಸ್.ಹೆಗಡೆ ಗೋಳಗೋಡ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಕುಗ್ಗದೇ, ಗೆದ್ದಾಗ ಬೀಗದೇ ಸಂಯಮದಿಂದ ನಡೆದುಕೊಳ್ಳುವುದು ಒಳ್ಳೆಯ ಕ್ರೀಡಾಪಟುವಿನ ಲಕ್ಷಣ. ಎಷ್ಟು ಪಂದ್ಯ ಗೆಲ್ಲುತ್ತೇವೆ ಎಂಬುದರ ಜೊತೆ ಕ್ರೀಡಾ ಸ್ಪೂರ್ತಿ ತೋರುವುದು, ಗೌರವಯುತವಾಗಿ ನಡೆದುಕೊಳ್ಳುವುದೂ ಕೂಡ ಮುಖ್ಯವಾಗಿರುತ್ತದೆ. ಒಟ್ಟಾರೆ ತಂಡದ ಕ್ರೀಡಾ ಸ್ಪೂರ್ತಿ, ಉತ್ತಮ ನಡತೆಯು ಸಂಘಟಕರಲ್ಲಿ, ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಹಸಿರಾಗಿರುತ್ತದೆ. ಅಂತಹ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದರು.
ದಿನೇಶ್ ಹೆಗಡೆ ಸಂದರ್ಭಕ್ಕೆ ತಕ್ಕಂತೆ ಅನಾದಿಕಾಲದ ಆಟಗಳ ಮಾಹಿತಿಯುಳ್ಳ ಕವಿತೆಯೊಂದನ್ನು ಪ್ರಸ್ತುತಪಡಿಸಿದರು.ಎರಡು ದಿನಗಳ ಕಾಲ ನಡೆದ ಸೋಮೇಶ್ವರ ಟ್ರೋಫಿ ಹವ್ಯಕ ಕೌಂಟಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ನಲ್ಲಿ ಸಿದ್ಧಿವಿನಾಯಕ ಗೋಳಿ ತಂಡ ಹಾಗೂ ಗರುಡಧ್ವಜ ಸೆಣಸಾಡಿ, ಗರುಡಧ್ವಜ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಸಂಪೂರ್ಣ ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಡಾ. ಆನಂದ್ ಹೆಗಡೆ ಶೀಗೆಹಳ್ಳಿ ನಡೆಸಿಕೊಟ್ಟರೆ, ಊರ ನಾಗರಿಕರು, ವಿಶೇಷವಾಗಿ ಮಹಿಳೆಯರು ಊಟೋಪಚಾರದ ಜೊತೆ ಎಲ್ಲಾ ರೀತಿಯ ಸಹಕಾರದೊಂದಿಗೆ ಪಂದ್ಯಾವಳಿಯ ಯಶಸ್ಸಿಗೆ ಕಾರಣೀಭೂತರಾದರು.